ಸೋಮವಾರ, ಫೆಬ್ರವರಿ 8, 2010

ಗಣಕಿಂಡಿ - ೦೩೮ (ಫೆಬ್ರವರಿ ೦೮, ೨೦೧೦)

ಅಂತರಜಾಲಾಡಿ

ಸಹಯೋಗಿ ಕುಮಾರವ್ಯಾಸಭಾರತ

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಕುವೆಂಪು ನಾರಣಪ್ಪ ಕವಿಯ ಗದುಗಿನ ಭಾರತವನ್ನು ಹಾಡಿ ಹೊಗಳಿದ್ದಾರೆ. ಮಹಾಭಾರತವು ಭಾರತೀಯರ ರಕ್ತದಲ್ಲಿ ಹರಿಯುತ್ತಿದೆ. ಅಂತೆಯೆ ಕುಮಾರವ್ಯಾಸಭಾರತ ಕನ್ನಡಿಗರಿಗೆ ತುಂಬ ಪ್ರೀತಿಯ ಮಹಾಕಾವ್ಯ. ಒಂದು ಕಾಲದಲ್ಲಿ ಈ ಕಾವ್ಯದ ವಾಚನ ಎಲ್ಲ ಹಳ್ಳಿಗಳಲ್ಲೂ ಜರುಗುತ್ತಿತ್ತು. ಈಗಲೂ ಈ ಕಾವ್ಯದ ಜನಪ್ರಿಯತೆ ಕಡಿಮೆಯಾಗಿಲ್ಲ. ಈ ಮಹಾಕಾವ್ಯವನ್ನು ಎಲ್ಲರಿಗೂ ದೊರೆಯುವಂತೆ ಅಂತರಜಾಲದಲ್ಲಿ ಹಾಕಿದರೆ ಹೇಗೆ? ಒಳ್ಳೆಯ ಆಲೋಚನೆ ಎಂದಿರಾ? ಆದರೆ ಅಷ್ಟು ದೊಡ್ಡ ಮಹಾಕಾವ್ಯವನ್ನು ಬೆರಳಚ್ಚು ಮಾಡಿ ಅಂತರಜಾಲದಲ್ಲಿ ಸೇರಿಸುವುದು ಒಬ್ಬರಿಂದ ಆಗುವ ಕೆಲಸವಲ್ಲ. ಹಲವರು ಸೇರಿ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು. ಹೀಗೆ ಮಾಡಲೆಂದೆ ಕೆಲವು ಆಸಕ್ತರು ಸೇರಿ ಒಂದು ಬ್ಲಾಗ್‌ತಾಣ ನಿರ್ಮಿಸಿದ್ದಾರೆ. ಅದರ ವಿಳಾಸ gaduginabharata.blogspot.com. ಇಲ್ಲಿ ಹೆಸರು ನೋಂದಾಯಿಸಿಕೊಂಡು ಈ ಕೆಲಸದಲ್ಲಿ ನೀವೂ ಕೈಜೋಡಿಸಬಹುದು.

ಡೌನ್‌ಲೋಡ್

ಗೂಢಚಾರಿಗಳನ್ನು ನಾಶಮಾಡಿ

ಗಣಕದಲ್ಲಿ ಕೆಲವೊಮ್ಮೆ ಗುಪ್ತವಾಗಿ ಅಡಗಿ ಕುಳಿತಿದ್ದು ನೀವು ಮಾಡುವ ಕೆಲಸಗಳನ್ನೆಲ್ಲ ದಾಖಲಿಸಿ ಯಾವುದೋ ಜಾಲತಾಣಕ್ಕೆ ಗುಪ್ತವಾಗಿ ರವಾನಿಸುವ ಕಿಡಿಗೇಡಿ ತಂತ್ರಾಂಶಗಳಿವೆ. ಇವು ಬಹು ಅಪಾಯಕಾರಿ. ಇವು ನಿಮ್ಮ ಗುಪ್ತಪದಗಳನ್ನು (ಪಾಸ್‌ವರ್ಡ್) ಕದಿಯುತ್ತವೆ. ನಿಮ್ಮ ಇಮೈಲ್‌ಗೆ ಯಾರೋ ಕದ್ದು ನುಸುಳಿ ನೀವೇ ಇಮೈಲ್ ಕಳುಹಿಸಿದ್ದುಎಂಬ ಭಾವನೆ ಬರುವಂತೆ ನಿಮ್ಮ ಸ್ನೇಹಿತರಿಗೆ ಇಮೈಲ್ ಮಾಡಿ ನಾನು ಕಷ್ಟದಲ್ಲಿದ್ದೇನೆ, ನನಗೆ ಹಣ ಕಳುಹಿಸಿ ಎಂಬಿತ್ಯಾದಿಯಾಗಿ ಇಮೈಲ್ ಮಾಡಿರುವುದು ವರದಿಯಾಗಿದೆ. ಇಂತಹ ಗೂಢಚಾರಿ ತಂತ್ರಾಂಶಗಳನ್ನು ಹುಡುಕಿ ನಾಶಮಾಡಲು Spybot - Search & Destroy ಎಂಬ ತಂತ್ರಾಂಶವನ್ನು ಬಳಸಬಹುದು. ಈ ತಂತ್ರಾಂಶ ದೊರೆಯು ಜಾಲತಾಣದ ವಿಳಾಸ http://bit.ly/c51kpP

e - ಸುದ್ದಿ

ಅಂತರಜಾಲ ಕ್ಯಾಮರಾದಿಂದಾಗಿ ಬದುಕುಳಿದ

ಜರ್ಮನಿಯ ಕರಾವಳಿಯಲ್ಲಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ನಡೆದಾಡುತ್ತ ಒಬ್ಬಾತ ದಾರಿ ತಪ್ಪಿದ. ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ಆತ ಸೂರ್ಯಾಸ್ತದ ಚಿತ್ರೀಕರಣ ಮಾಡಲೆಂದು ನಡೆಯುತ್ತ ಸಮುದ್ರದ ಒಳಗೆ ಸುಮಾರು ದೂರ ಹೋಗಿಬಿಟ್ಟದ್ದ. ಆ ನಂತರ ಹಿಂದಕ್ಕೆ ಬರಲು ಆತನಿಗೆ ದಾರಿ ತಿಳಿಯಲಿಲ್ಲ. ಎಲ್ಲ ಕಡೆ ನೋಡಿದರು ಬಿಳಿ ಬಣ್ಣವೇ. ಭೂಮಿ ಯಾವ ಕಡೆಗಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆತ ತನ್ನ ಕೈಯಲ್ಲಿದ್ದ ಟಾರ್ಚಿನಲ್ಲಿ ಒಂದೇ ಹಾಗೆ ಹೊತ್ತಿಸಿ ನಂದಿಸಿ ಸಂದೇಶ ಕಳುಹಿಸತೊಡಗಿದ. ಆತನ ಸಂದೇಶವನ್ನು ಅಲ್ಲಿ ಯಾರೂ ಗಮನಿಸಲಿಲ್ಲ. ಆದರೆ ನೂರಾರು ಮೈಲುಗಳ ದೂರದಲ್ಲಿ ಅಂತರಜಾಲ ಕ್ಯಾಮರ ಮೂಲಕ ಸೂರ್ಯಾಸ್ತ ವೀಕ್ಷಿಸುತ್ತಿದ್ದಾಕೆಯೊಬ್ಬಳು ಅದನ್ನು ಗಮನಿಸಿದಳು. ಜರ್ಮನಿಯ ಕರಾವಳಿಯ ಸೌಂದರ್ಯವನ್ನು ಸವಿಯಲೆಂದು ಕ್ಯಾಮರಾ ಇಟ್ಟು ಅದನ್ನು ಅಂತರಜಾಲಕ್ಕೆ ಜೋಡಿಸಲಾಗಿತ್ತು. ಆ ಕ್ಯಾಮರಾದಲ್ಲಿ ಈತನ ಸಂದೇಶ ಮೂಡಿ ಬರುತ್ತಿತ್ತು. ಅದನ್ನು ಆಕೆ ಪೋಲೀಸರಿಗೆ ವರದಿ ಮಾಡಿದಳು. ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಬದುಕಿಸಿದರು.

e- ಪದ

ಗೂಢಚಾರಿ ತಂತ್ರಾಂಶ (spyware) -ಗಣಕದಲ್ಲಿ ಗುಪ್ತವಾಗಿದ್ದುಕೊಂಡು ಮಾಹಿತಿಯನ್ನು ಸಂಗ್ರಹಿಸಿ ಅಂತರಜಾಲದ ಮೂಲಕ ಇನ್ಯಾರಿಗೋ ರವಾನಿಸುವ ಕಿಡಿಗೇಡಿ ತಂತ್ರಾಂಶ. ಇವು ರವಾನಿಸುವ ಮಾಹಿತಿ ಸಾಮಾನ್ಯವಾಗಿ ಇಮೈಲ್, ಅಂತರಜಾಲ ಬ್ಯಾಂಕಿಂಗ್‌ನ ಪಾಸ್‌ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಆಗಿರುತ್ತದೆ. ಕೆಲವು ಉಚಿತ ತಂತ್ರಾಂಶಗಳಲ್ಲಿ ಇವು ಗುಪ್ತವಾಗಿ ಸೇರ್ಪಡೆಯಾಗಿರುತ್ತವೆ. ಇನ್ನು ಕೆಲವು ಅಂತರಜಾಲ ತಾಣಗಳಲ್ಲೂ ಇವು ಇರುತ್ತವೆ. ಅಂತಹ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವಾಗ ಇವೂ ಜೊತೆಯಲ್ಲಿ ಬಂದುಬಿಡುತ್ತವೆ. 


e - ಸಲಹೆ

ಪ್ರ: ನನ್ನ ಗಣಕದಲ್ಲಿ ವೈರಸ್‌ಗಳು ತುಂಬಿವೆ. ಹಾರ್ಡ್‌ಡಿಸ್ಕನ್ನು ಫಾರ್ಮಾಟ್ ಮಾಡಿ ವೈರಸ್‌ಗಳನ್ನೆಲ್ಲ ನಾಶ ಮಾಡಿದರೆ ಪುನಃ ವಿಂಡೋಸ್ ಇನ್‌ಸ್ಟಾಲ್ ಮಾಡಲು ವಿಂಡೋಸ್ ಸಿ.ಡಿ./ಡಿ.ವಿ.ಡಿ. ಬೇಕಾಗುತ್ತದೆಯೇ?
ಉ: ಹೌದು. ಬಹುಪಾಲು ಮಂದಿ ವಿಂಡೋಸ್ ಅನ್ನು ಹಣ ಕೊಟ್ಟು ಕೊಂಡುಕೊಂಡಿರುವುದಿಲ್ಲ. ಇದರಿಂದಾಗಿ ಅವರಲ್ಲಿ ಅಸಲಿ ವಿಂಡೋಸ್ ಸಿ.ಡಿ./ಡಿ.ವಿ.ಡಿ. ಇರುವುದಿಲ್ಲ. ಇದರಿಂದಾಗಿ ವಿಂಡೋಸ್ ಅನ್ನು ಅಳಿಸಿ ಮತ್ತೊಮ್ಮೆ ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಕನಿಷ್ಠ ವಿಂಡೋಸ್ ಹಣ ಕೊಟ್ಟು ಕೊಂಡುಕೊಳ್ಳುವುದೇ ಒಳ್ಳೆಯದು. ಇದರಿಂದಾಗಿ ಆಗಾಗ ಬಿಡುಗಡೆಯಾಗುವ ನವೀಕರಣಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಗಣಕವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ಕಂಪ್ಯೂತರ್ಲೆ

ಭೂಮಿಯ ಮೇಲೆ ಹಸಿರು ಕಡಿಮೆಯಾಗುತ್ತಿದೆ. ಕೃಷಿ ಮಾಡುವುದೂ ಕಡಿಮೆಯಾಗುತ್ತಿದೆ. ಇದು ಹೀಗೆ ಸಾಗಿದರೆ ಒಳ್ಳೆಯದಲ್ಲ. ನಾನೂ ಸ್ವಲ್ಪ ಕೃಷಿ ಮಾಡಲೇ ಬೇಕು ಎಂದು ಕೋಲ್ಯ ನಿರ್ಧರಿಸಿದ. ಕೂಡಲೆ ಆತ ಮಾಡಿದ್ದೇನು ಗೊತ್ತೆ? ಅಂತರಜಾಲಕ್ಕೆ ಸಂಪರ್ಕ ಮಾಡಿ ಫೇಸ್‌ಬುಕ್ ಜಾಲತಾಣವನ್ನು ತೆರೆದು ಅದರಲ್ಲಿ ಫಾರ್ಮ್‌ವಿಲ್ಲೆ ಎಂಬ ಆಟದ ಮೂಲಕ ತೋಟಗಾರಿಕೆ ಸುರು ಮಾಡಿದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ