ಸೋಮವಾರ, ಮಾರ್ಚ್ 14, 2011

ಗಣಕಿಂಡಿ - ೦೯೫ (ಮಾರ್ಚ್ ೧೪, ೨೦೧೧)

ಅಂತರಜಾಲಾಡಿ

ದೃಷ್ಟಿಶಕ್ತಿ ವಂಚಿತರಿಗೆ
 
ಪ್ರಪಂಚದಲ್ಲಿ ದೃಷ್ಟಿಶಕ್ತಿಯಿಂದ ಪೂರ್ತಿಯಾಗಿ ಅಥವಾ ಸ್ವಲ್ಪ ವಂಚಿತರಾದವರು ತುಂಬ ಮಂದಿ ಇದ್ದಾರೆ. ಅದರಲ್ಲೂ ಭಾರತದಂತಹ ಬಡ(?) ದೇಶದಲ್ಲಿ ಅವರ ಸಂಖ್ಯೆ ಒಟ್ಟು ಜನಸಂಖ್ಯೆಗೆ ಅನುಪಾತ ಮಾಡಿ ನೋಡಿದರೆ ತುಂಬ ಹೆಚ್ಚು. ಇಂತಹವರುಗಳಲ್ಲಿ ಬಡವರ ಸಂಖ್ಯೆ ಹೆಚ್ಚು. ಅವರಿಗೆ ಬದುಕಲು ಸಹಾಯ ಮಾಡುವ ಒಂದು ಸಂಸ್ಥೆಯ ಜಾಲತಾಣ  www.visionaid.org. ಇವರು ದೃಷ್ಟಿಶಕ್ತಿ ವಂಚಿತರುಗಳಿಗೆ ಹಲವು ರೀತಿಯಲ್ಲಿ ತಮ್ಮ ಕಾಲಿನಲ್ಲಿ ನಿಂತುಕೊಳ್ಳುವಂತೆ ಮಾಡಲು ಅನುವು ಮಾಡಿಕೊಡುತ್ತಾರೆ. ಉದಾಹರಣೆಗೆ ಗಣಕ ಶಿಕ್ಷಣ. ಇಂತಹವರಿಗಾಗಿಯೇ ಇರುವ ತಂತ್ರಾಂಶಗಳನ್ನು ಬಳಸಿ ಅವರು ಶಿಕ್ಷಣ ನೀಡುತ್ತಾರೆ. ಇವರ ಕೆಲಸ ಕಾರ್ಯಗಳಲ್ಲಿ ನೀವು ಸಹಾಯ ಮಾಡಬಹುದು. ಅದು ಹೇಗೆ ಎಂಬ ವಿವರ ಜಾಲತಾಣದಲ್ಲಿದೆ.

ಡೌನ್‌ಲೋಡ್


ಧ್ವನಿ ಮೂಲಕ ಗಣಕ ಬಳಸಿ

ದೃಷ್ಟಿಶಕ್ತಿ ವಂಚಿತರಿಗೆ ಗಣಕ ಬಳಸಲು ಒಂದು ವಿಧಾನವೆಂದರೆ ಗಣಕದ ಪರದೆಯ ಮೇಲೆ ಮೂಡಿ ಬರುವ ಎಲ್ಲ ಅಕ್ಷರಗಳನ್ನು ಓದಿ ಹೇಳುವ ತಂತ್ರಾಂಶದ (screen-reader software) ಬಳಕೆ. ಇಂತಹ ವಾಣಿಜ್ಯಕ ತಂತ್ರಾಂಶಗಳು ಹಲವಾರಿವೆ. ಉಚಿತ ತಂತ್ರಾಂಶಗಳೂ ಇವೆ. ಅಂತಹ ಒಂದು ಉಚಿತ ಮತ್ತು ಮುಕ್ತ ತಂತ್ರಾಂಶ ದೊರೆಯುವ ಜಾಲತಾಣ www.nvda-project.org. ಇದು ಮೈಕ್ರೋಸಾಫ್ಟ್ ವಿಂಡೋಸ್‌ನಲ್ಲಿ ಕೆಲಸ ಮಾಡುತ್ತದೆ. ಇದನ್ನು ಬಳಸಲು eSpeak ಎಂಬ ಇನ್ನೊಂದು ತಂತ್ರಾಂಶ ಬೇಕು. ಅದು ದೊರೆಯುವ ಜಾಲತಾಣ espeak.sourceforge.net. ಈ ತಂತ್ರಾಂಶಗಳಲ್ಲಿ ಕನ್ನಡದ ಬಳಕೆ ಇನ್ನೂ ಅಷ್ಟೊಂದು ಸಮರ್ಪಕವಾಗಿ ಆಗಿಲ್ಲ. ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಇದರಲ್ಲಿ ಕನ್ನಡ ಇನ್ನೂ ಪರಿಪೂರ್ಣವಾಗಿ ಬಳಕೆಗೆ ಬಂದಿಲ್ಲ ಎಂದರೆ ಅದಕ್ಕೆ ಕನ್ನಡಿಗರೇ ಹೊಣೆ.

e - ಸುದ್ದಿ

ಸೋಲಿಗೆ ಫೇಸ್‌ಬುಕ್ ಕಾರಣ?

ಅಮೆರಿಕದ ಮಿಚಿಗನ್ ರಾಜ್ಯದ ರಾಜಕಾರಣಿಯಬ್ಬರು ತಮ್ಮ ಸೋಲಿಗೆ ಫೇಸ್‌ಬುಕ್ ಕಾರಣವೆಂದು ದೂರಿರುವುದು ಮಾತ್ರವಲ್ಲ ಅದಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಕೂಡ ಹೂಡಿದ್ದಾರೆ. ರಿಪಬ್ಲಿಕನ್ ಪಕ್ಷದ ಮೌಗ್ನಿ ಅವರು ಫೇಸ್‌ಬುಕ್‌ನಲ್ಲಿ ಖಾತೆ ತೆಗೆದು ಸಾವಿರಾರು ಹಿಂಬಾಲಕರನ್ನು ಪಡೆದು ಪ್ರಚಾರ ನಡೆಸಲು ಯೋಜನೆ ಹಾಕಿದ್ದರು. ಅವರು ತಮ್ಮ ಪುಟದ ತುಂಬ ತಮ್ಮ ವಿರೋಧಿಯ ಬಗ್ಗೆ ತೆಗಳಿಕೆಗಳನ್ನು ದಾಖಲಿಸಿದ್ದರು. ಆದರೆ ಫೇಸ್‌ಬುಕ್ ಅವರ ಪುಟವನ್ನೇ ತೆಗೆದುಹಾಕಿತು. ಈ ಕ್ರಮದಿಂದಾಗಿ ತಾನು ಚುನಾವಣೆಯಲ್ಲಿ ಸೋಲಬೇಕಾಯಿತು ಎಂದು ಅವರು ಫೇಸ್‌ಬುಕ್ ಮೇಲೆ ದಾವೆ ಹೂಡಿದ್ದಾರೆ.

e- ಪದ

ಐಎಸ್‌ಪಿ (ISP - Internet Service Provider) - ಅಂತರಜಾಲ ಸಂಪರ್ಕ ಸೇವೆ ನೀಡುವವರು. ನಿಗದಿತ ಹಣ ತೆಗೆದುಕೊಂಡು ಹಲವಾರು ವಿಧಾನಗಳ ಮೂಲಕ ಮನೆಗೆ, ಕಛೇರಿಗೆ ಅಥವಾ ಓಡಾಟದಲ್ಲಿರುವವರಿಗೆ ಅಂತರಜಾಲಕ್ಕೆ ಸಂಪರ್ಕ ನೀಡುತ್ತಾರೆ. ಈ ಸಂಪರ್ಕ ಡಯಲ್‌ಅಪ್, ಬ್ರ್ಯಾಡ್‌ಬ್ಯಾಂಡ್, ನಿಸ್ತಂತು (ವಯರ್‌ಲೆಸ್), ಕೇಬಲ್ -ಹೀಗೆ ಹಲವಾರು ವಿಧಾನಗಳಲ್ಲಿ ಯಾವುದಾದರೊಂದು ವಿಧಾನದಲ್ಲಿರಬಹುದು.
 
e - ಸಲಹೆ

ಶಿವಮೊಗ್ಗದ ಶ್ರೀಪಾದ ರಾವ್ ಅವರ ಪ್ರಶ್ನೆ: ಕನ್ನಡದಿಂದ ಇಂಗ್ಲಿಷ್ ಇಲ್ಲ ಬೇರೆ ಭಾಷೆಗೆ ಭಾಷಾಂತರ ತಂತ್ರಾಂಶ ಇದ್ದರೆ ಮಾಹಿತಿ ನೀಡಿ.
ಉ: ಸದ್ಯಕ್ಕೆ ಅಂತಹ ಪರಿಪೂರ್ಣ ತಂತ್ರಾಂಶ ಲಭ್ಯವಿಲ್ಲ.

ಕಂಪ್ಯೂತರ್ಲೆ

ಮನೆಯಾಕೆ: ಯಾಕೆ ಒಂದು ವಾರದಿಂದ ಕೆಲಸಕ್ಕೆ ಬಂದಿಲ್ಲ?
ಕೆಲಸದಾಕೆ: ನಾನು ಊರಲ್ಲಿರಲಿಲ್ಲ. ಅದನ್ನು ಫೇಸ್‌ಬುಕ್‌ನಲ್ಲೂ ದಾಖಲಿಸಿದ್ದೆ. ನಿಮ್ಮ ಯಜಮಾನರು ಅದನ್ನು ಓದಿ “ಆದಷ್ಟು ಬೇಗನೆ ವಾಪಾಸು ಬಾ, ನೀನಿಲ್ಲದೆ ಬೋರ್ ಆಗುತ್ತಿದೆ ಎಂದು ಕಮೆಂಟ್ ಕೂಡ ಹಾಕಿದ್ದರು”.

1 ಕಾಮೆಂಟ್‌: