ಮಂಗಳವಾರ, ಸೆಪ್ಟೆಂಬರ್ 27, 2011

ಗಣಕಿಂಡಿ - ೧೨೩ (ಸಪ್ಟಂಬರ್ ೨೫, ೨೦೧೧)

ಅಂತರಜಾಲಾಡಿ

ಪಂಚತಂತ್ರ

ಪಂಚತಂತ್ರದ ಕಥೆ ಗೊತ್ತಿಲ್ಲದವರು ಇರಲಿಕ್ಕಿಲ್ಲ. ಹಾಗೆಂದ ತಕ್ಷಣ “ಇಲ್ಲ, ನಮಗೆ ಎಲ್ಲ ಕಥೆಗಳು ಗೊತ್ತಿಲ್ಲ. ಹಿಂದೊಮ್ಮೆ ಓದಿದ್ದೆವು, ಆದರೆ ಈಗ ನೆನಪಿಲ್ಲ” ಎನ್ನುವವರೂ ಇದ್ದಾರೆ. ದೊಡ್ಡವರಾದಂತೆ ಹಿಂದೆ ಯಾವಾಗಲೋ ಮಕ್ಕಳಾಗಿದ್ದಾಗ ಓದಿದ ಕಥೆಗಳು ಮರೆತು ಹೋಗುತ್ತವೆ. ಆದರೆ ಮಕ್ಕಳಿಗೆ ಕಥೆ ಹೇಳಲು ಅವುಗಳನ್ನು ಮತ್ತೊಮ್ಮೆ ಓದಬೇಕಾಗುತ್ತದೆ. ಪಂಚತಂತ್ರದ ಕಥೆಗಳು ಎಂದೆಂದಿಗೂ ಪ್ರಸ್ತುತ. ಪಂಚತಂತ್ರದ ಕಥೆಗಳನ್ನು ಅಂತರಜಾಲದಲ್ಲೂ (ಇಂಗ್ಲೀಶಿನಲ್ಲಿ) ಓದಬಹುದು. ಅದಕ್ಕೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - panchatantra.org. ಮೊನ್ನೆಯಷ್ಟೇ ಮಕ್ಕಳ ಪ್ರೀತಿಯ “ಅಂಕಲ್ ಪೈ” ತೀರಿಕೊಂಡರು. ಅವರು ಅಮರ ಚಿತ್ರ ಕಥೆಗಳ ಮೂಲಕ ಪಂಚತಂತ್ರ ಮತ್ತು ಇತರೆ ಕಥೆಗಳನ್ನು ಜನಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ್ದಾರೆ. ಅಮರ ಚಿತ್ರ ಕಥೆಗಳ ಜಾಲತಾಣ www.amarchitrakatha.com .

ಡೌನ್‌ಲೋಡ್

ಯುಎಸ್‌ಬಿ ಡ್ರೈವ್ ವೇಗ ಪತ್ತೆ ಹಚ್ಚಿ

ನೀವೊಂದು ಯುಎಸ್‌ಬಿ ಡ್ರೈವ್ ಕೊಂಡುಕೊಂಡಿದ್ದೀರಾ. ಅಂಗಡಿಯವನು ಅದು ಇಂತಿಷ್ಟು ವೇಗದಲ್ಲಿ ಮಾಹಿತಿಯನ್ನು ಬರೆಯಬಲ್ಲುದು ಹಾಗು ಇಂತಿಷ್ಟು ವೇಗದಲ್ಲಿ ಮಾಹಿತಿಯನ್ನು ಓದಬಹುದು ಎಂದು ಹೇಳಿರಬಹುದು. ಯುಎಸ್‌ಬಿ ಡ್ರೈವ್‌ನ ಓದುವ ಮತ್ತು ಬರೆಯುವ ವೇಗಗಳು ಅತಿ ದೊಡ್ಡ ಗಾತ್ರದ ಫೈಲನ್ನು ಬರೆಯುವಾಗ ಅಥವಾ ಓದುವಾಗ ಅತಿ ಮುಖ್ಯವಾಗುತ್ತವೆ. ಯುಎಸ್‌ಬಿ ಡ್ರೈವ್‌ಗಳು ಹಲವು ವೇಗಗಳಲ್ಲಿ ದೊರೆಯುತ್ತವೆ. ನೀವು ಕೊಂಡುಕೊಂಡ ಡ್ರೈವ್ ಅಂಗಡಿಯಾತ ಹೇಳಿದಷ್ಟು ವೇಗವನ್ನು ನಿಜವಾಗಿಯೂ ನೀಡುತ್ತಿದೆಯೆ ಎಂದು ಪತ್ತೆ ಹಚ್ಚುವುದು ಹೇಗೆ? ಅದಕ್ಕೆಂದೇ ಒಂದು ಉಚಿತ ತಂತ್ರಾಂಶ HD_Speed ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/oyeBtJ.

e - ಸುದ್ದಿ

ಕಾರು ಪತ್ತೆಗೆ ತಂತ್ರಾಂಶ

ಅಮೆರಿಕದ ಮಾರುಕಟ್ಟೆ ಸಂಕೀರ್ಣಗಳಲ್ಲಿ ಕಾರು ಪಾರ್ಕಿಂಗ್ ತುಂಬ ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಹಲವಾರು ಮಹಡಿಗಳನ್ನು ಹೊಂದಿದ್ದು ಎಲ್ಲಿ ಕಾರು ಇಟ್ಟಿದ್ದೇನೆ ಎಂದು ನೆನಪಿಟ್ಟುಕೊಳ್ಳವುದು ಕಷ್ಟವಾಗುತ್ತದೆ. ಈ ರೀತಿಯ ಬಹುಮಹಡಿಯ ಪಾರ್ಕಿಂಗ್ ಸೌಲಭ್ಯ ಈಗ ಬೆಂಗಳೂರಿಗೂ ಬಂದಿದೆ. ವ್ಯಾಪಾರ ಮುಗಿಸಿ ಬಂದು ಕಾರು ಎಲ್ಲಿಟ್ಟಿದ್ದೆ ಎಂದು ಹುಡುಕುವುದೇ ಒಮ್ಮೊಮ್ಮೆ ದೊಡ್ಡ ತಲೆನೋವಿನ ಕೆಲಸವಾಗುತ್ತದೆ. ಈಗ ಇಂತಹವರಿಗಾಗಿಯೇ ಒಂದು ತಂತ್ರಾಂಶ ತಯಾರಾಗಿದೆ. ಪಾರ್ಕಿಂಗ್ ಜಾಗದಲ್ಲಿ ಕ್ಯಾಮರ ಇರುತ್ತದೆ. ಎಲ್ಲ ಕಾರುಗಳ ನೋಂದಣಿ ಸಂಖ್ಯೆಯನ್ನು ಅದು ಗಮನಿಸುತ್ತಿರುತ್ತದೆ. ಕಾರು ಹುಡುಕುವವರು ತಮ್ಮ ಐಫೋನ್‌ನಲ್ಲಿ ತಮ್ಮ ಕಾರು ಸಂಖ್ಯೆ ನಮೂದಿಸಿದೊಡನೆ ಆ ಸಂಖ್ಯೆಯ ಕಾರು ಎಲ್ಲಿದೆ ಎಂದು ತಿಳಿಸುತ್ತದೆ. ಈ ತಂತ್ರಾಂಶವನ್ನು ಕಾರು ಕಳ್ಳರನ್ನು ಪತ್ತೆಹಚ್ಚಲೂ ಬಳಸಬಹುದು. 
 
e- ಪದ

ಡಾಟಾ ವೇರ್‌ಹೌಸ್ (data warehouse) ಯಾವುದೇ ವಿಷಯಕ್ಕೆ ಸಂಬಂಧಿಸಿದ ದತ್ತಸಂಚಯವನ್ನು ಅಥವಾ ದತ್ತಸಂಚಯಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ ಅರ್ಥಾತ್ ದತ್ತಸಂಚಯ ಉಗ್ರಾಣ. ಹಲವು ಬಗೆಯ ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಸ್ಥೆಗಳು ಈ ಉಗ್ರಾಣದಿಂದ ಪಡೆದ ವಿವಿಧ ಮಾದರಿಯ ವರದಿಗಳನ್ನು ಬಳಸುತ್ತವೆ.

e - ಸಲಹೆ

ರಾಜು ಅವರ ಪ್ರಶ್ನೆ: ನಾನು ದ್ವಿತೀಯ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿದ್ದು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಬೇಕಾಗಿವೆ. ಎಲ್ಲಿ ಸಿಗುತ್ತವೆ?
ಉ: bit.ly/mZb5xp ನೋಡಿ. 

ಕಂಪ್ಯೂತರ್ಲೆ

ಗಣಕ ತಜ್ಞ ಕೋಲ್ಯನನ್ನು ಬೆಂಗಳೂರಿನ ಸಾರಿಗೆ ಉಸ್ತುವಾರಿಗೆ ಮುಖ್ಯಸ್ಥನನ್ನಾಗಿ ನೇಮಿಸಿದರು. ಬೆಂಗಳೂರಿನಲ್ಲೆಲ್ಲ ನಮ್ಮ ಮೆಟ್ರೋ ಕೆಲಸ ನಡೆಯುತ್ತಿರುವುದರಿಂದ ರಸ್ತೆಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿವೆ. ಇಂತಹ ಸಂದರ್ಭಗಳಿಗೆಂದು ಕೋಲ್ಯ ಒಂದು ಬೋರ್ಡ್ ತಯಾರಿಸಿದ. ರಸ್ತೆ ಮುಚ್ಚಿದಾಗೆಲ್ಲ ಅದನ್ನು ಬಳಸುವಂತೆ ಆದೇಶ ಹೊರಡಿಸಿದ. ಆ ಫಲಕದಲ್ಲಿ ಹೀಗೆಂದು ಬರೆದಿತ್ತು “404 Not found -  ರಸ್ತೆ ನಾಪತ್ತೆಯಾಗಿದೆ”.

1 ಕಾಮೆಂಟ್‌: